ಹೆಬ್ಬಾಳದಲ್ಲಿ “ಸಾವಯವ ಸಿರಿಧಾನ್ಯ ಹಬ್”: ಜ.23ರಂದು ಭೂಮಿ ಪೂಜೆ

ಸಿರಿಧಾನ್ಯ ಮತ್ತು ಸಾವಯವ ಪದಾರ್ಥಗಳ ಉತ್ಪಾದಕರು, ಮಾರುಕಟ್ಟೆದಾರರು, ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವ ಹಾಗೂ ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ ಕೃಷಿ ಇಲಾಖೆಯು ಹೆಬ್ಬಾಳದಲ್ಲಿ ‘ಸಾವಯವ -ಸಿರಿಧಾನ್ಯ ಹಬ್’ ನಿರ್ಮಾಣ ಮಾಡುತ್ತಿದೆ.

       ಹೆಬ್ಬಾಳದಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದ ಎದುರಿನ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಈ ಹಬ್‌ ತಲೆ ಎತ್ತಲಿದೆ. ಎಲ್ಲವೂ ಯೋಜನೆ ಪ್ರಕಾರ ಸಾಗಿದರೆ, ಮುಂದಿನ ವರ್ಷ ಈ ಕೇಂದ್ರ ಬಳಕೆಗೆ ಸಿದ್ಧವಾಗಲಿದೆ.

ಕೇಂದ್ರ ಸರ್ಕಾರದ ₹12 ಕೋಟಿ, ರಾಜ್ಯ ಸರ್ಕಾರದ ₹8 ಕೋಟಿ ಅನುದಾನ ಸೇರಿ ಒಟ್ಟು ₹20 ಕೋಟಿ ವೆಚ್ಚದಲ್ಲಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ(ಆರ್‌ಕೆವಿವೈ) ಈ ಹಬ್ ನಿರ್ಮಾಣವಾಗುತ್ತಿದೆ. 18 ತಿಂಗಳಲ್ಲಿ ‘ಹಬ್‌’ ನಿರ್ಮಾಣ ಪೂರ್ಣಗೊಳಿಸಲು ಸಮಯ ನಿಗದಿಯಾಗಿದೆ.

ಸಿರಿಧಾನ್ಯ ಸಾವಯವ ಉತ್ಪನ್ನಗಳ ಉತ್ಪಾದನೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ನವೋದ್ಯಮಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ), ರೈತ ಉತ್ಪಾದಕ ಕಂಪನಿಗಳು(ಎಫ್‌ಪಿಸಿ), ಸ್ವಸಹಾಯ ಸಂಘಗಳು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಕೆಲ ಎಫ್‌ಪಿಒಗಳು ವಿದೇಶಗಳಿಗೂ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ.

ಯಾರಿಗೆಲ್ಲ ಅನುಕೂಲ :

‘ಹಬ್’ನಲ್ಲಿ ಗ್ರಾಹಕರಿಗೆ ಸಾವಯವ ಉತ್ಪನ್ನಗಳು ಮತ್ತು ಸಿರಿ ಧಾನ್ಯಗಳ ಕುರಿತ ಮಾಹಿತಿ ಲಭ್ಯವಾಗುತ್ತದೆ. ಮೌಲ್ಯವರ್ಧಿತ ಉತ್ಪನ್ನಗಳು, ರೆಡಿ ಟು ಕುಕ್ ಮತ್ತು ರೆಡಿ ಟು ಈಟ್ ಉತ್ಪನ್ನಗಳು ಖರೀದಿಗೆ ಲಭ್ಯವಾಗುತ್ತವೆ. ಸಿರಿಧಾನ್ಯದ ಆಹಾರದ ರುಚಿ ಸವಿಯಬಹುದು. ಅಡುಗೆ ತಯಾರಿಯ ಬಗ್ಗೆಯೂ ಮಾಹಿತಿ ಪಡೆಯಬಹುದು.

ಬಹುಮುಖ್ಯವಾಗಿ ಕೃಷಿಕರಿಗೆ, ಎಫ್‌ಫಿಒ/ಎಫ್‌ಪಿಸಿ, ನವೋದ್ಯಮಗಳು ಮತ್ತು ಸಾವಯವ ಮತ್ತು ಸಿರಿ ಧಾನ್ಯ ಪದಾರ್ಥಗಳ ಉತ್ಪಾದನೆ/ಸಂಸ್ಕರಣೆ/ಮಾರಾಟದಲ್ಲಿ ತೊಡಗಿರುವ ಎಲ್ಲ ಪಾಲುದಾರರಿಗೆ ಇಲ್ಲಿ ಅಗತ್ಯ ಮಾಹಿತಿಗಳು ಲಭ್ಯವಾಗುತ್ತವೆ.

ಮೂಲ: ಪ್ರಜಾವಾಣಿ